ಭಟ್ಕಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೨೪೭೭ ವಿದ್ಯಾರ್ಥಿಗಳು
ಭಟ್ಕಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೨೪೭೭ ವಿದ್ಯಾರ್ಥಿಗಳು
ಭಟ್ಕಳ:೩೧ ಎಸ್ ಎಸ್ ಎಲ್ ಸಿ ಪರೀಕ್ಷೆ ನಾಳೆಯಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಭಟ್ಕಳದ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ. ಈ ಸಲ ತಾಲೂಕಿನ ೨೮ ಪ್ರೌಢಶಾಲೆಗಳಿಂದ ಒಟ್ಟೂ ೨೪೭೭ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಗರದ ನ್ಯೂ ಇಂಗ್ಲೀಷ್ ಸ್ಕೂಲ, ಅಂಜುಮಾನ ಆಂಗ್ಲೋ ಉರ್ದು ಹೈಸ್ಕೂಲ್, ಅಂಜುಮಾನ ಹೆಣ್ಣುಮಕ್ಕಳ ಹೈಸ್ಕೂಲ್,ಸೋನಾರಕೇರಿ ಸರಕಾರಿ ಪ್ರೌಢಶಾಲೆ, ಬೆಳಕೆ ಸರಕಾರಿ ಪ್ರೌಢಶಾಲೆ, ಶಿರಾಲಿ ಜನತಾ ವಿದ್ಯಾಲಯ, ಮುರ್ಡೇಶ್ವರ ಜನತಾ ವಿದ್ಯಾಲಯ, ಮುರ್ಡೇಶ್ವರದ ನ್ಯಾಶನಲ್ ಹೈಸ್ಕೂಲ್ನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಈ ಸಲ ಬೆಳಕೆ ಹೈಸ್ಕೂಲಿನಲ್ಲಿ ಹೊಸಾಗಿ ಪರೀಕ್ಷಾ ಕೇಂದ್ರವನ್ನು ತೆರೆದಿರುವುದು ಅಲ್ಲಿನ ವಿದ್ಯಾರ್ಥಿಗಳಿಗೆ ನಗರಕ್ಕೆ ಬರುವುದು ತಪ್ಪಿದಂತಾಗಿದೆ. ತಾಲೂಕಿನಲ್ಲಿ ಎಂಟು ಸರಕಾರಿ, ೯ ಅನುದಾನಿತ ಹಾಗೂ ೧೧ ಅನುದಾನ ರಹಿತ ಸೇರಿದಂತೆ ಒಟ್ಟೂ ೨೮ ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳಿಂದ ೧೧೯೯ ಹೆಣ್ಣುಮಕ್ಕಳು ಹಾಗೂ ೧೨೭೮ ಗಂಡು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಎಂಟು ಪರೀಕ್ಷಾ ಕೇಂದ್ರಗಳಿಗೆ ಅನುದಾನಿತ ಹಾಗೂ ಅನುದಾನಿತ ಪ್ರೌಢಶಾಲೆಗಳ ಹಾಗೂ ಪ್ರಾಥಮಿಕ ಶಾಲೆಗಳ ಸುಮಾರು ೧೨೩ ಶಿಕ್ಷಕರನ್ನು ಕೊಟಡಿ ಮೇಲ್ವಿಚಾರಕರನ್ನಾಗಿ ನೇಮಕಗೊಳಿಸಲಾಗಿದೆ. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಯಲ್ಲಮ್ಮ ಹಾಗೂ ದೈಹಿಕ ಶಿಕ್ಷಣಾಧಿಕಾರಿ ಎನ್ ಜಿ ಗೌಡರ ನೇತೃತ್ವದಲ್ಲಿ ಎರಡು ಮೇಲ್ವಿಚಾರಕರ ತಂಡವನ್ನು ರಚಿಸಲಾಗಿದೆ. ಅದರಂತೆ ಸಿಟಿಂಗ್ ಸ್ಕ್ವಾಡ್ ಆಗಿ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಹಿರಿಯ ಶಿಕ್ಷಕರನ್ನೊಳಗೊಂಡ ೧೬ ಮಂದಿಯನ್ನು ನೇಮಕಗೊಳಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ನಕಲು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ ವಿಧಿಸಲಾಗುತ್ತಿದ್ದು, ಪೊಲೀಸ್ ಬಂದೋಬಸ್ತ ಸಹ ಏರ್ಪಡಿಸಿದ್ದು ಕಂಡು ಬಂದಿದೆ. ಪರೀಕ್ಷೆ ನಾಳೆಯಿಂದ ಆರಂಭಗೊಂಡು ಎಪ್ರಿಲ್ ೯ ಕ್ಕೆ ಅಂತ್ಯಗೊಳ್ಳಲಿದೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ದತೆಯನ್ನು ಅಚ್ಚುಕಟ್ಟಿನಿಂದ ನಡೆಸಲಾಗಿದ್ದು, ಈ ಸಲ ಬೆಳಕೆ ಹೈಸ್ಕೂಲಿನಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಈ ಸಲ ಪರೀಕ್ಷೆ ಬರೆಯುವದರಲ್ಲಿ ಸ್ವಲ್ಪ ಬದಲಾವಣೆ ಇರುವುದರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ತಾಲೂಕಿನ ಫಲಿತಾಂಶವನ್ನು ಹೆಚ್ಚಿಸುವ ದೃಷ್ಟಿಯಿಂದ ಕಲಿಕೆಯಲ್ಲಿ ಹಿಂದಳಿದಿರುವ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕಾಲ ನುರಿತ ಶಿಕ್ಷಕರಿಂದ ವಿಶೇಷ ತರಗತಿಯನ್ನೂ ಸಹ ನಡೆಸಲಾಗಿದ್ದು,ಇದು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಅನುಕೂಲವಾಗಲಿದೆ ಎಂದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ